ಕಪೂರ್ ಆ್ಯಂಡ್ ಸನ್ಸ್ (ಸಿನ್ಸ್ 1921) ಎಂದೂ ಕರೆಯಲ್ಪಡುವ ಕಪೂರ್ ಆ್ಯಂಡ್ ಸನ್ಸ್ ಒಂದು ಹಿಂದಿ ಕೌಟುಂಬಿಕ ನಾಟಕ ಚಲನಚಿತ್ರವಾಗಿದೆ. ಇದನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದು, ಕರನ್ ಜೋಹರ್, ಹೀರೂ ಯಶ್ ಜೋಹರ್ ಹಾಗೂ ಅಪೂರ್ವ ಮೆಹ್ತಾ ಧರ್ಮಾ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟೂಡಿಯೋಸ್ ಲಾಂಛನಗಳ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಫವಾದ್ ಖಾನ್, ಆಲಿಯಾ ಭಟ್, ರತ್ನಾ ಪಾಠಕ್ ಶಾ, ರಜತ್ ಕಪೂರ್, ಮತ್ತು ರಿಷಿ ಕಪೂರ್ ನಟಿಸಿರುವ ಸಮೂಹ ಪಾತ್ರವರ್ಗವಿದೆ. ಕಪೂರ್ ಆ್ಯಂಡ್ ಸನ್ಸ್ ಇಬ್ಬರು ಅಗಲಿದ ಸಹೋದರರು ತಮ್ಮ ಅಜ್ಜನು ಹೃದಯ ಸ್ತಂಭನಕ್ಕೆ ಒಳಗಾದಾಗ ತಮ್ಮ ಅಪಸಾಮಾನ್ಯ ಕುಟುಂಬಕ್ಕೆ ಮರಳುವ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಮಾರ್ಚ್ 18, 2016 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಇದರ ನಿರ್ದೇಶನ ಮತ್ತು ಅಭಿನಯಗಳನ್ನು, ವಿಶೇಷವಾಗಿ ರಿಷಿ ಕಪೂರ್, ಶಾ ಮತ್ತು ಖಾನ್‍ರ ಅಭಿನಯಗಳನ್ನು ಪ್ರಶಂಸಿಸಲಾಯಿತು. ₹35 ಕೋಟಿ ಬಂಡವಾಳದಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವಾದ್ಯಂತ ₹152 ಕೋಟಿಗಿಂತ ಹೆಚ್ಚು ಆದಾಯ ಗಳಿಸಿತು. 62 ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಕಪೂರ್ ಆ್ಯಂಡ್ ಸನ್ಸ್ ರಿಷಿ ಕಪೂರ್‌ರಿಗೆ ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಕಥೆ ಮತ್ತು ಅತ್ಯುತ್ತಮ ಚಿತ್ರಕಥೆ ಸೇರಿದಂತೆ ಐದು ಪ್ರಶಸ್ತಿಗಳನ್ನು ಗೆದ್ದಿತು. ಇದು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತು. == ಕಥಾವಸ್ತು == ತಮ್ಮ 90 ವರ್ಷದ ಅಜ್ಜ ಅಮರ್ಜೀತ್‍ನಿಗೆ ಹೃದಯಾಘಾತವಾದಾಗ ಅಗಲಿರುವ ಸಹೋದರರಾದ ರಾಹುಲ್ ಮತ್ತು ಅರ್ಜುನ್ ಕಪೂರ್ ಕೂನೂರಿನಲ್ಲಿರುವ ತಮ್ಮ ಬಾಲ್ಯದ ಮನೆಗೆ ಮರಳಲೇಬೇಕಾಗುತ್ತದೆ. ರಾಹುಲ್ ಲಂಡನ್‍ನಲ್ಲಿ ಆಧಾರ ಮಾಡಿಕೊಂಡ ಯಶಸ್ವಿ ಬರಹಗಾರನಾಗಿದ್ದು, ಅವರ ಕುಟುಂಬದಲ್ಲಿ ಅತಿಹೆಚ್ಚು ಪ್ರಬುದ್ಧನಾಗಿ ಕಾಣಿಸುತ್ತಾನೆ. ಮತ್ತೊಂದೆಡೆ, ಅರ್ಜುನ್ ತನ್ನ ಪುಸ್ತಕಗಳನ್ನು ಪ್ರಕಟಿಸಲು ಹೆಣಗಾಡುತ್ತಾನೆ ಮತ್ತು ಖರ್ಚುಗಳನ್ನು ನಿಭಾಯಿಸಲು ನೇವಾರ್ಕ್‌ನಲ್ಲಿ ಪಾನಗೃಹದ ಪರಿಚಾರಕನಾಗಿ ಅರೆಕಾಲಿಕ ಕೆಲಸ ಮಾಡುವುದನ್ನು ಆಶ್ರಯಿಸುತ್ತಾನೆ ಮತ್ತು ಬಿಡುವಿನ ವೇಳೆಯಲ್ಲಿ ಬರೆಯುತ್ತಿರುತ್ತಾನೆ. ರಾಹುಲ್ ಯಶಸ್ವಿಯಾಗಿರುವ ಕಾರಣ ಅವನ ಪೋಷಕರಾದ ಹರ್ಷ್ ಮತ್ತು ಸುನೀತಾ ರಾಹುಲ್ ಕಡೆಗೆ ಒಲವು ತೋರುತ್ತಾರೆ. ಇದು ಅರ್ಜುನ್‍ನನ್ನು ಅಸಮಾಧಾನಗೊಳಿಸುತ್ತದೆ. ಸಹೋದರರು ಸಹಬಾಳ್ವೆ ಮಾಡಲು ಹೆಣಗಾಡುತ್ತಿರುವಾಗ, ಅವರ ಹೆತ್ತವರು ತಮ್ಮ ತೊಂದರೆಗೀಡಾದ ದಾಂಪತ್ಯದೊಂದಿಗೆ ಕಾದಾಡುತ್ತಿರುತ್ತಾರೆ. ಒಂದು ಅಡುಗೆ ಉದ್ಯಮವನ್ನು ಪ್ರಾರಂಭಿಸುವ ಸುನೀತಾಳ ಆಸೆಯನ್ನು ಹರ್ಷ್ ವಿರೋಧಿಸುತ್ತಿರುತ್ತಾನೆ. ಅವನ ಹಿಂದಿನ ವಿವಾಹೇತರ ಸಂಬಂಧವು ಅವರ ಸಂಬಂಧವನ್ನು ಕಳಂಕಿತಗೊಳಿಸಿರುತ್ತದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವಾಗ, "ಕಪೂರ್ ಆ್ಯಂಡ್ ಸನ್ಸ್ 1921 ರಿಂದ "ಎಂಬ ಹೆಸರಿನ ಕೌಟುಂಬಿಕ ಭಾವಚಿತ್ರವನ್ನು ತೆಗೆಸಿಕೊಳ್ಳಬೇಕೆಂಬುದು ತನ್ನ ಕೊನೆಯ ಆಸೆ ಎಂದು ಅಮರ್‌ಜೀತ್ ವ್ಯಕ್ತಪಡಿಸುತ್ತಾನೆ. ಅಮರ್‌ಜೀತ್‌ನ ಆಸ್ಪತ್ರೆಯ ಶುಲ್ಕವನ್ನು ಪಾವತಿಸಲು ಹರ್ಷ್ ತನ್ನ ಎಫ್‌ಡಿಯನ್ನು ಮುರಿಸಿದ್ದಾನೆ ಎಂದು ಸುನೀತಾಗೆ ತಿಳಿಯುತ್ತದೆ. ತನ್ನ ಅಡುಗೆ ವ್ಯವಹಾರವನ್ನು ಪ್ರಾರಂಭಿಸಲು ಹಣವನ್ನು ಉಳಿಸಿದ್ದ ಕಾರಣ ಅವಳಿಗೆ ಮೋಸ ಹೋಗಿದ್ದೇನೆಂದು ಅನಿಸುತ್ತದೆ. ಸುನೀತಾ ಹರ್ಷ್‌ನ ಎದುರು ನಿಂತು ಅವರಿಬ್ಬರು ವಾದಕ್ಕಿಳಿಯುತ್ತಾರೆ. ಇದು ಶೀಘ್ರದಲ್ಲೇ ಅರ್ಜುನ್ ಮತ್ತು ರಾಹುಲ್ ಇಬ್ಬರನ್ನೂ ಒಳಗೊಳ್ಳುತ್ತದೆ. ಅರ್ಜುನ್ ಯೋಚನೆ ಮಾಡದೆಯೇ ಮನೆಯಿಂದ ಹೊರಟು ತನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಒಂದು ಪಾರ್ಟಿಗೆ ಹೋಗುತ್ತಾನೆ. ಅಲ್ಲಿ ಅವನು ಟಿಯಾ ಮಲಿಕ್ ಎಂಬ ಯುವ ಮತ್ತು ಮುಕ್ತ ಮನೋಭಾವದ ಹುಡುಗಿ ಮತ್ತು ಮನೆ ಮಾಲಿಕೆಯ ಸ್ನೇಹಬೆಳೆಸಿ ಅವಳತ್ತ ಆಕರ್ಷಿತನಾಗುತ್ತಾನೆ. ಮರುದಿನ ತನ್ನ ಆಸ್ತಿಯ ಸಮೀಕ್ಷೆ ಮಾಡುವಾಗ ರಾಹುಲ್ ಕೂಡ ಟಿಯಾಳನ್ನು ಭೇಟಿಯಾಗುತ್ತಾನೆ. ಇಬ್ಬರೂ ಊಟಕ್ಕೆ ಹೊರಹೋಗುತ್ತಾರೆ. ಆದರೆ, ಅವಳು ಸಹಜವಾಗಿ ತನ್ನನ್ನು ಚುಂಬಿಸಿದಾಗ ರಾಹುಲ್ ಆಘಾತಗೊಳ್ಳುತ್ತಾನೆ. ಅರ್ಜುನ್ ಜೊತೆ ವಿಹಾರಕಾಲದ ಸಂದರ್ಭದಲ್ಲಿ, ತನ್ನ ಹದಿಮೂರನೆಯ ವಯಸ್ಸಿನಲ್ಲಿ ತನ್ನ ಹೆತ್ತವರನ್ನು ಕಳೆದುಕೊಂಡು ಏಕಾಂಗಿಯಾಗಿ ವಾಸಿಸುತ್ತಿದ್ದೇನೆಂದು ಟಿಯಾ ಬಹಿರಂಗಪಡಿಸುತ್ತಾಳೆ. ರಾಹುಲ್ ತನ್ನ ಹೆಚ್ಚುಮಾರಾಟವಾಗಬಲ್ಲ ಕಾದಂಬರಿಯನ್ನು ಬರೆಯುವ ತನ್ನ ಕಲ್ಪನೆಯನ್ನು ಕೃತಿಚೌರ್ಯ ಮಾಡುತ್ತಿದ್ದಾನೆಂದು ತಾನು ಶಂಕಿಸುತ್ತಿದ್ದೇನೆ, ಆದರೆ ಕುಟುಂಬದಲ್ಲಿ ಮತ್ತೊಂದು ಬಿರುಕು ಉಂಟಾಗುವುದನ್ನು ತಪ್ಪಿಸಲು ಅವನು ಎಂದಿಗೂ ತನ್ನ ಸಹೋದರನ ಎದುರು ನಿಲ್ಲಲಿಲ್ಲವೆಂದು ಅರ್ಜುನ್ ಅವಳಿಗೆ ಹೇಳುತ್ತಾನೆ. ತಾನು ಅರ್ಜುನ್‌ನನ್ನು ಪ್ರೀತಿಸುತ್ತಿದ್ದೇನೆ ಮತ್ತು ರಾಹುಲ್‌ನನ್ನು ಚುಂಬಿಸಿದ್ದಕ್ಕೆ ವಿಷಾದಿಸುತ್ತೇನೆ ಎಂದು ಟಿಯಾ ತನ್ನ ಸ್ನೇಹಿತನಿಗೆ ತಿಳಿಸುತ್ತಾಳೆ. ಕಪೂರ್ ಕುಟುಂಬವು ಅಮರ್ಜೀತ್‍ನ ಜನ್ಮದಿನವನ್ನು ಆಚರಿಸಲು ಒಂದು ಪಾರ್ಟಿಯನ್ನು ಏರ್ಪಡಿಸುತ್ತದೆ. ಟಿಯಾ ಮತ್ತು ರಾಹುಲ್ ಒಬ್ಬರಿಗೊಬ್ಬರು ಪರಿಚಿತರಾಗಿರುವರು ಎಂದು ಅರ್ಜುನ್‌ಗೆ ತಿಳಿಯುತ್ತದೆ. ಅವರ ನಡುವೆ ಏನೋ ಇದೆ ಎಂದು ಅವನು ಭಯಪಡುತ್ತಾನೆ. ಆದರೆ ರಾಹುಲ್ ತಾನು ಈಗಾಗಲೇ ಲಂಡನ್‍ನಲ್ಲಿ ಬದ್ಧವಾದ ಸಂಬಂಧದಲ್ಲಿದ್ದೇನೆ ಎಂದು ಸ್ಪಷ್ಟಪಡಿಸುತ್ತಾನೆ. ಹರ್ಷ್ ತಾನು ಸಂಬಂಧ ಹೊಂದಿದ್ದ ಮಹಿಳೆಯಾದ ಅನುಳನ್ನು ಆಹ್ವಾನಿಸಿದ್ದಾನೆ ಎಂದು ಕುಟುಂಬವು ಕಂಡುಕೊಂಡಾಗ ಸಮಸ್ಯೆಗಳು ಉದ್ಭವಿಸುತ್ತವೆ. ಇದು ಮತ್ತೊಂದು ಜಗಳಕ್ಕೆ ಕಾರಣವಾಗಿ ಪಾರ್ಟಿ ಅಂತ್ಯಗೊಳ್ಳುತ್ತದೆ. ಹರ್ಷ್ ಮತ್ತು ಸುನೀತಾ ತಾವು ಎಷ್ಟು ಸಂತೋಷವಾಗಿದ್ದೆವು ಎಂದು ನಂತರ ಸ್ಮರಿಸಿಕೊಳ್ಳುತ್ತಾರೆ. ತಮ್ಮ ಎಲ್ಲಾ ಹಣವನ್ನು ಕಳೆದುಕೊಂಡಿದ್ದಕ್ಕಾಗಿ ಹರ್ಷ್ ಕ್ಷಮೆಯಾಚಿಸುತ್ತಾನೆ. ಕುಟುಂಬದ ಫೋಟೋ ತೆಗೆಯಬೇಕೆಂಬ ಅಮರ್ಜೀತ್‍ನ ಆಸೆಯನ್ನು ಈಡೇರಿಸಲು ಕಪೂರ್ ಕುಟುಂಬ ಪ್ರಯತ್ನಿಸುತ್ತದೆ. ಆದರೆ ಆ ದಿನ ವಿವಿಧ ಹಾನಿಕಾರಕ ರಹಸ್ಯಗಳು ಬೆಳಕಿಗೆ ಬರುತ್ತವೆ. ಅನುಳೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿರುವುದರ ಬಗ್ಗೆ ತನ್ನ ತಂದೆ ಸುಳ್ಳು ಹೇಳಿದ್ದು ರಾಹುಲ್‍ಗೆ ಗೊತ್ತಾಗುತ್ತದೆ. ಲಂಡನ್‌ನಲ್ಲಿ ರಾಹುಲ್ ಹೊಂದಿರುವ ಸಂಬಂಧವು ವಾಸ್ತವವಾಗಿ ಇನ್ನೊಬ್ಬ ಪುರುಷನೊಂದಿಗಿನದು ಎಂದು ಸುನೀತಾಗೆ ಗೊತ್ತಾಗುತ್ತದೆ. ತನ್ನ ಮತ್ತು ರಾಹುಲ್ ನಡುವೆ ಏನು ನಡೆಯಿತು ಎಂಬುದನ್ನು ಟಿಯಾ ವಿಷಾದದಿಂದ ಅರ್ಜುನ್‍ನಿಗೆ ಹೇಳಿದಾಗ ಅವನು ಕೋಪಗೊಳ್ಳುತ್ತಾನೆ. ಅರ್ಜುನ್ ಮನೆಗೆ ಹಿಂದಿರುಗಿದಾಗ ರಾಹುಲ್ ತನ್ನ ಇತ್ತೀಚಿನ ಹಸ್ತಪ್ರತಿಯನ್ನು ಓದುತ್ತಿದ್ದಾನೆಂದು ತಿಳಿದು ಅವನ ಮೇಲೆ ದೈಹಿಕವಾಗಿ ಆಕ್ರಮಣ ಮಾಡುತ್ತಾನೆ. ಸುನೀತಾ ಹೋರಾಟವನ್ನು ಅಂತ್ಯಗೊಳಿಸಿ ಅರ್ಜುನ್ ಲೇಖಕನಾಗುವ ಬಗ್ಗೆ ಗಂಭೀರವಾಗಿಲ್ಲ ಎಂದು ಭಾವಿಸಿ, ತಾನೇ ಅವನ ಮೊದಲ ಹಸ್ತಪ್ರತಿಯನ್ನು ರಾಹುಲ್‍ಗೆ ಕೊಟ್ಟಿದ್ದಾಗಿ ಅರ್ಜುನ್ ಮುಂದೆ ಒಪ್ಪಿಕೊಳ್ಳುತ್ತಾಳೆ. ಏತನ್ಮಧ್ಯೆ, ಹರ್ಶ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದಾಗ ಕುಟುಂಬವು ಆಘಾತಗೊಳ್ಳುತ್ತದೆ. ಅಂತ್ಯಕ್ರಿಯೆಯ ನಂತರ, ತಾನು ಸಲಿಂಗಕಾಮಿ ಎಂದು ರಾಹುಲ್ ಅರ್ಜುನ್‍ಗೆ ಬಹಿರಂಗಪಡಿಸುತ್ತಾನೆ ಮತ್ತು ಇಬ್ಬರೂ ಅನುಕ್ರಮವಾಗಿ ಲಂಡನ್ ಹಾಗೂ ನೆವಾರ್ಕ್‌ಗೆ ತೆರಳುತ್ತಾರೆ. ನಾಲ್ಕು ತಿಂಗಳ ನಂತರ, ಸಹೋದರರಿಗೆ ಅಮರ್‌ಜೀತ್‌ನಿಂದ ವೀಡಿಯೊ ಸಂದೇಶವೊಂದು ಬರುತ್ತದೆ. ಅದರಲ್ಲಿ ತಾನು ಏಕಾಂಗಿಯಾಗಿರುವ ಕಾರಣ ಅವರು ಹಿಂತಿರುಗುವಂತೆ ವಿನಂತಿಸಿರುತ್ತಾನೆ. ಸುನೀತಾ ರಾಹುಲ್‍ನ ಸಲಿಂಗಕಾಮವನ್ನು ಒಪ್ಪಿಕೊಳ್ಳುತ್ತಾಳೆ. ತಮ್ಮ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಂಡು ಅರ್ಜುನ್ ಮತ್ತು ಟಿಯಾ ಮತ್ತೆ ಒಂದಾಗುತ್ತಾರೆ. ಕುಟುಂಬವು ಅಂತಿಮವಾಗಿ ಅಮರ್ಜೀತ್ ಬಯಸಿದ ಕುಟುಂಬದ ಫೋಟೋವನ್ನು ತೆಗೆಸಿಕೊಳ್ಳುತ್ತದೆ. ಅಲ್ಲಿ ಅವರು ಹರ್ಷ್‌ನ ನೆನಪಿನಲ್ಲಿ ಅವನ ಕಟೌಟ್‍ನ್ನು ಇಡುತ್ತಾರೆ. == ಪಾತ್ರವರ್ಗ == ಅರ್ಜುನ್ ಕಪೂರ್ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ರಾಹುಲ್ ಕಪೂರ್ ಪಾತ್ರದಲ್ಲಿ ಫವಾದ್ ಖಾನ್ ಟಿಯಾ ಮಲಿಕ್ ಪಾತ್ರದಲ್ಲಿ ಆಲಿಯಾ ಭಟ್ ಸುನೀತಾ ಕಪೂರ್ ಪಾತ್ರದಲ್ಲಿ ರತ್ನಾ ಪಾಠಕ್ ಷಾ ಹರ್ಷ್ ಕಪೂರ್ ಪಾತ್ರದಲ್ಲಿ ರಜತ್ ಕಪೂರ್ ಅಮರ್‌ಜೀತ್ ಕಪೂರ್ ಪಾತ್ರದಲ್ಲಿ ರಿಷಿ ಕಪೂರ್ ನೀತೂ ಕಪೂರ್ ಪಾತ್ರದಲ್ಲಿ ಅನಾಹಿತಾ ಉಬೆರಾಯ್ ಶಶಿ ಕಪೂರ್ ಪಾತ್ರದಲ್ಲಿ ವಿಕ್ರಮ್ ಕಪಾಡಿಯಾ ಅನು ಪಾತ್ರದಲ್ಲಿ ಅನುರಾಧಾ ಚಂದನ್ ಆಲಿಯಾ ಪಾತ್ರದಲ್ಲಿ ಶನಾಯಾ ಕಪೂರ್ ಕಿಶೋರ್ ಪಾತ್ರದಲ್ಲಿ ಪ್ರದೀಪ್ ಪ್ರಧಾನ್ ಬೂಬ್ಲಿ ಪಾತ್ರದಲ್ಲಿ ಫಾಹೀಮ್ ಶೇಖ್ ಸಾಹಿಲ್ ಪಾತ್ರದಲ್ಲಿ ಆಲೇಖ್ ಕಪೂರ್ ವಸೀಮ್ ಪಾತ್ರದಲ್ಲಿ ಸುಕಾಂತ್ ಗೋಯಲ್ ಬಂಕೂ ಪಾತ್ರದಲ್ಲಿ ಆಕೃತಿ ದೋಭಾಲ್ ಮನ್‌ಪ್ರೀತ್ ಪಾತ್ರದಲ್ಲಿ ಮುಸ್ಕಾನ್ ಖನ್ನಾ ಶರಣ್ ರಾಹುಲ್‍ನ ವ್ಯವಸ್ಥಾಪಕನಾಗಿ ಎಲೀನಾ ಫರ್ನಾಂಡಿಸ್ ಶಾರಿಕ್ ಪಾತ್ರದಲ್ಲಿ ಅರ್ಬಾಜ಼್ ಕಡ್ವಾನಿ ಜ಼ೋಯಿ ಪಾತ್ರದಲ್ಲಿ ಆರ್ಯಾ ಶರ್ಮಾ ಅಜ್ಜ ಚೌಕ್ಸಿ ಪಾತ್ರದಲ್ಲಿ ಬುರ್ಜೋರ್ ಪಟೇಲ್ ಶ್ರೀ ಮಖೀಜಾ ಪಾತ್ರದಲ್ಲಿ ಚಂದ್ರಜೀತ್ ರಣಾವ್ಡೆ ಮುಚ್ಛಡ್ ಪಾನ್‍ವಾಲಾ ಪಾತ್ರದಲ್ಲಿ ರಾಮ್ ಸಿಂಗ್ ಟಿಮ್ಮಿ ಮೌಸಿ ಪಾತ್ರದಲ್ಲಿ ರೂಪಾ ಕಾಮತ್ ಡ್ಯಾನ್ ಪಾತ್ರದಲ್ಲಿ ಎಡ್ವರ್ಡ್ ಸಾನನ್‍ಬ್ಲಿಕ್ ಗೀಶು ಪಾತ್ರದಲ್ಲಿ ರಾಜು == ತಯಾರಿಕೆ == 2015 ರ ಆರಂಭದಲ್ಲಿ, ಕರನ್ ಜೋಹರ್ ಕಪೂರ್ ಆ್ಯಂಡ್ ಸನ್ಸ್ ಎಂಬ ಶೀರ್ಷಿಕೆಯ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದರು. == ಧ್ವನಿವಾಹಿನಿ == ಚಿತ್ರಕ್ಕೆ ಸಂಗೀತವನ್ನು ಅಮಾಲ್ ಮಲಿಕ್, ಬಾದ್‌ಶಾ, ಆರ್ಕೊ, ತನಿಷ್ಕ್ ಬಾಗ್ಚಿ, ಬೆನಿ ದಯಾಲ್ ಮತ್ತು ನ್ಯೂಕ್ಲಿಯಾ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಮೀರ್ ಉದ್ದೀನ್ ನೀಡಿದ್ದಾರೆ. ಸಾಹಿತ್ಯವನ್ನು ಬಾದ್‌ಶಾ, ಕುಮಾರ್, ಮನೋಜ್ ಮುಂತಶೀರ್, ಡಾ. ದೇವೇಂದ್ರ ಕಾಫಿರ್, ಮತ್ತು ಅಭಿರುಚಿ ಚಾಂದ್ ಬರೆದಿದ್ದಾರೆ. ಸೋನಿ ಮ್ಯೂಸಿಕ್ ಇಂಡಿಯಾ ಚಿತ್ರದ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿದೆ. 62 ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಮೀರ್ ಉದ್ದೀನ್ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ೫ ಹಾಡುಗಳಿರುವ ಪೂರ್ಣ ಸಂಗೀತ ಧ್ವನಿಸುರುಳಿ ಸಂಗ್ರಹವನ್ನು ಸೋನಿ ಮ್ಯೂಸಿಕ್ ಇಂಡಿಯಾ 4 ಮಾರ್ಚ್ 2016 ರಂದು ಬಿಡುಗಡೆ ಮಾಡಿತು. == ವಿಮರ್ಶಾತ್ಮಕ ಪ್ರತಿಕ್ರಿಯೆ == ಬಿಡುಗಡೆಯಾದ ನಂತರ ಚಲನಚಿತ್ರವು ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯಿತು, ವಿಶೇಷವಾಗಿ ಖಾನ್ ಅವರ ಅಭಿನಯಕ್ಕಾಗಿ. == ಬಾಕ್ಸ್ ಆಫ಼ಿಸ್ == === ದೇಶೀಯ === ಚಿತ್ರಮಂದಿರಗಳಲ್ಲಿ ಮೂರು ವಾರಗಳು ಓಡಿದ ನಂತರ, ಈ ಚಿತ್ರವು ₹ 102.24 ಕೋಟಿಯಷ್ಟು ಗಳಿಸಿತು. ಇದು ಒಟ್ಟು ₹ 100 ಕೋಟಿಗಿಂತ ಹೆಚ್ಚು ಗಳಿಸಿದ ವರ್ಷದ ಮೂರನೇ ಚಿತ್ರವಾಗಿತ್ತು. === ಅಂತಾರಾಷ್ಟ್ರೀಯ === ಚಿತ್ರದ ಜೀವಿತಾವಧಿಯಲ್ಲಿ ಸಾಗರೋತ್ತರ ಸಂಗ್ರಹವು ₹ 478 ಮಿಲಿಯನ್‍ನಷ್ಟಾಗಿತ್ತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೧೪ ಜನವರಿ ೨೦೧೭ - ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಪೋಷಕ ನಟ - ರಿಷಿ ಕಪೂರ್ - ಗೆಲುವು ಅತ್ಯುತ್ತಮ ಪೋಷಕ ನಟ - ಫವಾದ್ ಖಾನ್ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟ - ರಜತ್ ಕಪೂರ್ - ನಾಮನಿರ್ದೇಶಿತ ಅತ್ಯುತ್ತಮ ನಿರ್ದೇಶಕ - ಶಕುನ್ ಬಾತ್ರಾ - ನಾಮನಿರ್ದೇಶಿತ ಅತ್ಯುತ್ತಮ ಕಥೆ - ಆಯೇಶಾ ದೇವಿತ್ರೆ, ಶಕುನ್ ಬಾತ್ರಾ - ಗೆಲುವು ಅತ್ಯುತ್ತಮ ಚಿತ್ರಕಥೆ - ಆಯೇಶಾ ದೇವಿತ್ರೆ, ಶಕುನ್ ಬಾತ್ರಾ - ಗೆಲುವು ಅತ್ಯುತ್ತಮ ಹಿನ್ನೆಲೆ ಸಂಗೀತ - ಸಮೀರ್ ಉದ್ದೀನ್ - ಗೆಲುವು ಅತ್ಯುತ್ತಮ ನೃತ್ಯ ನಿರ್ದೇಶನ - ಆದಿಲ್ ಶೇಖ್ ("ಕರ್ ಗಯಿ ಚುಲ್" ಹಾಡಿಗಾಗಿ) - ಗೆಲುವು ಅತ್ಯುತ್ತಮ ಪೋಷಕ ನಟಿ - ರತ್ನಾ ಪಾಠಕ್ ಶಾ - ನಾಮನಿರ್ದೇಶಿತ ಅತ್ಯುತ್ತಮ ಚಲನಚಿತ್ರ - ಕಪೂರ್ ಆ್ಯಂಡ್ ಸನ್ಸ್ (ಸಿನ್ಸ್ 1921) - ನಾಮನಿರ್ದೇಶಿತ ಅತ್ಯುತ್ತಮ ಸಂಗೀತ ನಿರ್ದೇಶಕ - ಅಮಾಲ್ ಮಲಿಕ್, ಬಾದ್‍ಶಾ, ಆರ್ಕೊ ಪ್ರಾವೊ ಮುಖರ್ಜಿ, ತನಿಷ್ಕ್ ಬಾಗ್ಚಿ, ಬೆನಿ ದಯಾಲ್, ನ್ಯೂಕ್ಲೆಯಾ - ನಾಮನಿರ್ದೇಶಿತ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == & @ ಐ ಎಮ್ ಡಿ ಬಿ ಕಪೂರ್ ಆ್ಯಂಡ್ ಸನ್ಸ್ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಕಪೂರ್ ಆ್ಯಂಡ್ ಸನ್ಸ್ (ಚಲನಚಿತ್ರ)